ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ನವದೆಹಲಿಯಲ್ಲಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ರನ್ನು ಭೇಟಿ ಮಾಡಿದ ಡ್ಯಾನಿಶ್ ಆರೋಗ್ಯ ಸಚಿವ ಶ್ರೀ ಮ್ಯಾಗ್ನಸ್ ಹ್ಯೂನಿಕ್ ನೇತೃತ್ವದ ಉನ್ನತ ಮಟ್ಟದ ನಿಯೋಗ


ಆರೋಗ್ಯ ಕಾರ್ಯಕರ್ತರಿಗಾಗಿ ಜಂಟಿ ತರಬೇತಿ ಕಾರ್ಯಕ್ರಮ ಕುರಿತು ಚರ್ಚಿಸಿದ ಎರಡೂ ಕಡೆಯವರು

ಈ ವರ್ಷದ ಜನವರಿಯಲ್ಲಿ, ದೆಹಲಿಯಲ್ಲಿ ನಡೆದ ಜಂಟಿ ಎಸ್ ಮತ್ತು ಟಿ ಸಮಿತಿ ಸಭೆಯಲ್ಲಿ ಹಸಿರು ಜಲಜನಕ ಸೇರಿದಂತೆ ಹಸಿರು ಇಂಧನಗಳ ಕುರಿತು ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಭಾರತ ಮತ್ತು ಡೆನ್ಮಾರ್ಕ್ ಒಪ್ಪಿವೆ ಎಂಬುದನ್ನು ಸ್ಮರಿಸಿದ ಡಾ ಜಿತೇಂದ್ರ ಸಿಂಗ್

Posted On: 14 MAR 2022 5:28PM by PIB Bengaluru

ಡ್ಯಾನಿಶ್ ಆರೋಗ್ಯ ಸಚಿವ, ಮ್ಯಾಗ್ನಸ್ ಹ್ಯೂನಿಕ್ ಅವರಿಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ); ಭೂ ವಿಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ, ಆರೋಗ್ಯ ಕಾರ್ಯಕರ್ತರ ಜಂಟಿ ತರಬೇತಿ ಕಾರ್ಯಕ್ರಮಗಳ ಕುರಿತಂತೆ ಚರ್ಚಿಸಿದರು.

ಡೆನ್ಮಾರ್ಕ್‌ ನ ನೊವೊ ನಾರ್ಡಿಸ್ಕ್ ಪ್ರತಿಷ್ಠಾನ ತಾತ್ಕಾಲಿಕ ಆಸ್ಪತ್ರೆಗಳ ಯೋಜನೆಯ ಯಶಸ್ಸಿನಿಂದ ಪ್ರೇರಿತವಾಗಿ ಭಾರತದಲ್ಲಿ ಅದರ ಅನುಷ್ಠಾನಕ್ಕೆ 100 ದಶಲಕ್ಷ ಅಮೆರಿಕನ್ ಡಾಲರ್ ಯೋಜನೆಯನ್ನು ರೂಪಿಸಿದೆ ಎಂದು ಮ್ಯಾಗ್ನಸ್ ಹ್ಯೂನಿಕ್ ಅವರು ಡಾ. ಜಿತೇಂದ್ರ ಸಿಂಗ್‌ ಅವರಿಗೆ ತಿಳಿಸಿದರು. ಈ ಯೋಜನೆಯು ಕಾರ್ಡಿಯೋ-ಮೆಟಬಾಲಿಕ್ ಕಾಯಿಲೆಗಳಲ್ಲಿ ಆರೋಗ್ಯ ಕಾರ್ಯಕರ್ತರ ಸಂಶೋಧನೆ-ಮಾರ್ಗದರ್ಶಿತ ತರಬೇತಿಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಆರಂಭಿಕ ಹಂತದ ಮಧುಮೇಹ ಮತ್ತು ಇತರ ಸಿಎಂ.ಡಿ. ರೋಗಗಳ ವೈದ್ಯಕೀಯೇತರ ನಿರ್ವಹಣೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಕಾರ್ಯಕ್ರಮವು ಸಮರ್ಥನೀಯ ವ್ಯವಸ್ಥೆಯನ್ನು ರೂಪಿಸುತ್ತದೆ.

ಡ್ಯಾನಿಶ್ ಆರೋಗ್ಯ ಸಚಿವರ ನೇತೃತ್ವದ ನಿಯೋಗವು ಅವರ ಭಾರತೀಯ ಸಹವರ್ತಿಗಳೊಂದಿಗೆ, ವಿಶೇಷವಾಗಿ ಹಸಿರು ವ್ಯೂಹಾತ್ಮಕ ಪಾಲುದಾರಿಕೆಯಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಗತಿಯನ್ನು ಪರಿಶೀಲಿಸಿತು.

ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ, ಭಾರತದಲ್ಲಿನ ಡ್ಯಾನಿಶ್ ರಾಯಭಾರ ಕಚೇರಿಯು ಭಾರತದಲ್ಲಿನ ತುರ್ತುಚಿಕಿತ್ಸೆಯ  ಆಸ್ಪತ್ರೆಗಳನ್ನು ಬೆಂಬಲಿಸಲು ನೊವೊ ನಾರ್ಡಿಸ್ಕ್ ಪ್ರತಿಷ್ಠಾನದಿಂದ 10 ದಶಲಕ್ಷ ಡ್ಯಾನಿಶ್ ಕ್ರೋನೆರ್ (ಸುಮಾರು 12 ಕೋಟಿ ರೂ.) ಅನುದಾನವನ್ನು ಕೊಡಮಾಡಿತ್ತು ಎಂದು ಡಾ ಜಿತೇಂದ್ರ ಸಿಂಗ್ ನೆನಪಿಸಿಕೊಂಡರು. ಅಂತಹ ಆರು ಆಸ್ಪತ್ರೆಗಳು ಪಂಜಾಬ್‌ ನಲ್ಲಿ ಎರಡು, ಹರಿಯಾಣ, ನಾಗಾಲ್ಯಾಂಡ್ ಮತ್ತು ಅಸ್ಸಾಂಗಳಲ್ಲಿ ತಲಾ ಒಂದು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ಇನ್ನೂ ಎರಡು ಆಸ್ಪತ್ರೆಗಳು ನಿರ್ಮಾಣ ಹಂತದಲ್ಲಿವೆ. ಈ ಆಸ್ಪತ್ರೆಗಳನ್ನು ನವೀನ ಸಾಮಗ್ರಿಗಳು ಮತ್ತು ಪ್ರಕ್ರಿಯೆಗಳ ಮೂಲಕ, ನವೋದ್ಯಮಗಳನ್ನು ಸೇರಿಸಿಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಥಾಪಿಸಲಾಗಿದೆ.

ಈ ಆಸ್ಪತ್ರೆಗಳನ್ನು ಭಾರತೀಯ ಸಂಸ್ಥೆಗಳಾದ ಸಿ-ಕ್ಯಾಂಪ್ (ಬೆಂಗಳೂರು) ಮತ್ತು ಇನ್ವೆಸ್ಟ್ ಇಂಡಿಯಾದ ಬೆಂಬಲದೊಂದಿಗೆ ರಾಜ್ಯಗಳಲ್ಲಿ ಸ್ಥಾಪಿಸಲಾಗಿದೆ ಮತ್ತು ಈ ಸಂಪೂರ್ಣ ಕಸರತ್ತು ಭಾರತೀಯ ನವೋದ್ಯಮಗಳು ಮತ್ತು ಸಾಂಸ್ಥಿಕ ವಲಯದ ಬೆಂಬಲದೊಂದಿಗೆ ವಿದೇಶಿ-ಒಕ್ಕೂಟ-ರಾಜ್ಯ-ಖಾಸಗಿ ಸಹಕಾರಕ್ಕೆ ಉದಾಹರಣೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು. ಭಾರತ ಮತ್ತು ಡ್ಯಾನಿಶ್ ಸರ್ಕಾರೇತರ ಮತ್ತು ಖಾಸಗಿ ವಲಯಗಳ ನಡುವಿನ ಇಂತಹ ಪಾಲುದಾರಿಕೆಗಳು ನಮ್ಮ ಎರಡು ದೇಶಗಳ ನಡುವಿನ ಬಲವಾದ ಬಾಂಧವ್ಯದ ಸಂಕೇತವಾಗಿದೆ ಎಂದೂ ಸಚಿವರು ಹೇಳಿದರು.

ಡಾ ಜಿತೇಂದ್ರ ಸಿಂಗ್ ಈ ವರ್ಷದ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಜಂಟಿ ಎಸ್ ಮತ್ತು ಟಿ ಸಮಿತಿ ಸಭೆಯಲ್ಲಿ ಹಸಿರು ಜಲ ಜನಕ ಸೇರಿದಂತೆ ಹಸಿರು ಇಂಧನಗಳ ಕುರಿತು ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಭಾರತ ಮತ್ತು ಡೆನ್ಮಾರ್ಕ್ ಒಪ್ಪಿವೆ ಎಂಬುದನ್ನು ಸ್ಮರಿಸಿದರು.

ಜಂಟಿ ಸಮಿತಿಯು ಭವಿಷ್ಯದ ಹಸಿರು ಪರಿಹಾರಗಳ ಮೇಲೆ ವಿಶೇಷ ಗಮನಹರಿಸಿ - ಹಸಿರು ಸಂಶೋಧನೆ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿನ ಹೂಡಿಕೆಯ ತಂತ್ರದ ಕುರಿತಂತೆ ರಾಷ್ಟ್ರೀಯ ವ್ಯೂಹಾತ್ಮಕ ಆದ್ಯತೆಗಳು ಮತ್ತು ಎರಡೂ ದೇಶಗಳ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಬೆಳವಣಿಗೆಗಳ ಬಗ್ಗೆ ವರ್ಚುವಲ್ ಸಭೆಯಲ್ಲಿ ಚರ್ಚಿಸಿದವು. 

ಹಸಿರು ವ್ಯೂಹಾತ್ಮಕ ಸಹಭಾಗಿತ್ವವನ್ನು ಅಳವಡಿಸಿಕೊಳ್ಳುವಾಗ ಉಭಯ ಪ್ರಧಾನಮಂತ್ರಿಯವರು ಸಮ್ಮತಿಸಿದಂತೆ ಹವಾಮಾನ ಮತ್ತು ಹಸಿರು ಪರಿವರ್ತನೆ, ಇಂಧನ, ನೀರು, ತ್ಯಾಜ್ಯ, ಆಹಾರ ಸೇರಿದಂತೆ ಅಭಿಯಾನ-ಚಾಲಿತ ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ ಸಹಯೋಗದ ಅಭಿವೃದ್ಧಿಗೆ - ಕ್ರಿಯಾ ಯೋಜನೆ 2020-2025 ಸಮಿತಿಯು ಒತ್ತು ನೀಡಿತು. ಅವರು ಪಾಲುದಾರಿಕೆ ಅಭಿವೃದ್ಧಿಗಾಗಿ 3-4 ವೆಬ್ನಾರ್‌ ಗಳನ್ನು ಆಯೋಜಿಸಲು ಸಮ್ಮತಿಸಿದ್ದು, ಹಸಿರು ಜಲಜನಕ ಸೇರಿದಂತೆ ಹಸಿರು ಇಂಧನಗಳಲ್ಲಿ ಪ್ರಸ್ತಾಪಗಳಿಗೆ ಕರೆಯನ್ನು ಉತ್ತೇಜಿಸಲು ಒತ್ತು ನೀಡಿದರು.

ಜಂಟಿ ಸಮಿತಿಯು ಕಳೆದ ಎರಡು ಜಂಟಿ ಸಭೆಗಳಲ್ಲಿ ನಿರ್ಧರಿಸಿದಂತೆ ಇಂಧನ ಸಂಶೋಧನೆ, ನೀರು; ಸೈಬರ್-ಭೌತಿಕ ವ್ಯವಸ್ಥೆಗಳು ಮತ್ತು ಜೈವಿಕ ಸಂಪನ್ಮೂಲಗಳು ಮತ್ತು ಮಾಧ್ಯಮಿಕ ಕೃಷಿ ಕ್ಷೇತ್ರಗಳಲ್ಲಿ ಪ್ರಗತಿಯಲ್ಲಿರುವ ಯೋಜನೆಗಳ ಪ್ರಗತಿಯನ್ನು ಪರಾಮರ್ಶಿಸಿತು.

***



(Release ID: 1805972) Visitor Counter : 236


Read this release in: English , Hindi