ಸಂಪುಟ

ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಗ್ರಹ ಸಹಕಾರ ಕುರಿತಂತೆ ಭಾರತ - ರಷ್ಯಾ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ

Posted On: 22 NOV 2017 4:02PM by PIB Bengaluru

ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಗ್ರಹ ಸಹಕಾರ ಕುರಿತಂತೆ ಭಾರತ - ರಷ್ಯಾ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಲ್ಲ ಸ್ವರೂಪದ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಗ್ರಹ ಸಹಕಾರ ಕುರಿತಂತೆ ಭಾರತ ಮತ್ತು ರಷ್ಯಾ ನಡುವಿನ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ಪ್ರಸ್ತಾಪಿತ ಒಪ್ಪಂದಕ್ಕೆ ಗೃಹ ಸಚಿವರ ನೇತೃತ್ವದ ಭಾರತೀಯ ನಿಯೋಗ 2017ರ ನವೆಂಬರ್ 27ರಿಂದ 29ರವರೆಗೆ ಕೈಗೊಳ್ಳಲಿರುವ ರಷ್ಯಾ ಅಧಿಕೃತ ಭೇಟಿಯ ವೇಳೆ ಅಂಕಿತ ಹಾಕಲಾಗುತ್ತದೆ.
ಹಿನ್ನೆಲೆ: 
ಭಾರತ ಮತ್ತು ರಷ್ಯಾ ದೇಶಗಳು ಪರಸ್ಪರ ಹಿತಾಸಕ್ತಿಯ ವಿಚಾರಗಳಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಪ್ತ ಸಹಕಾರ ನೀಡುವಲ್ಲಿ ಸುದೀರ್ಘ ಇತಿಹಾಸ ಹೊಂದಿವೆ. ವಿಶ್ವಾದ್ಯಂತ ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆ ಹೆಚ್ಚುತ್ತಿರುವ ಸನ್ನಿವೇಶದಲ್ಲಿ ಎಲ್ಲ ಸ್ವರೂಪದ ಭಯೋತ್ಪಾದನೆಯನ್ನು ನಿಗ್ರಹಿಸಲು ದೇಶಗಳು ಒಗ್ಗೂಡಿ ಶ್ರಮಿಸುವ ಅಗತ್ಯವಿದೆ. ಈ ಪ್ರಸ್ತಾಪಿತ ಒಪ್ಪಂದವು 1993ರ ಅಕ್ಟೋಬರ್ ನಲ್ಲಿ ಆಗಿದ್ದ ಒಪ್ಪಂದವನ್ನು ಬದಲಾಯಿಸುತ್ತದೆ ಮತ್ತು ಭದ್ರತೆಯ ಕ್ಷೇತ್ರದಲ್ಲಿನ ಪ್ರಯೋಜನಗಳನ್ನು ಕ್ರೋಢೀಕರಿಸಲು ಮತ್ತು ಹೊಸ ಹಾಗೂ ಹೊರಹೊಮ್ಮುವ ಅಪಾಯಗಳು ಮತ್ತು ಬೆದರಿಕೆಗಳ ವಿರುದ್ಧ ಜಂಟಿಯಾಗಿ ಹೋರಾಡುವ ಪ್ರಯತ್ನದ ಹೆಜ್ಜೆಯಾಗಿದೆ. ಈ ಒಪ್ಪಂದವು ತಜ್ಞತೆ, ಉತ್ತಮ ಪದ್ಧತಿಗಳು ಮತ್ತು ಮಾಹಿತಿಯ ವಿನಿಮಯದ ಮೂಲಕ  ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯವನ್ನು ಪುನಶ್ಚೇತನಗೊಳಿಸುತ್ತದೆ ಮತ್ತು ಭಯೋತ್ಪಾದನೆ ನಿಗ್ರಹಿಸಲು ಹಾಗೂ ವಲಯದಲ್ಲಿ ಭದ್ರತೆ ಹೆಚ್ಚಿಸಲು ನೆರವಾಗುತ್ತದೆ
*****



(Release ID: 1510479) Visitor Counter : 85


Read this release in: English , Gujarati , Tamil