ಪ್ರಧಾನ ಮಂತ್ರಿಯವರ ಕಛೇರಿ

ಬಸವ ಜಯಂತಿ 2017ರ ಉದ್ಘಾಟನೆ ಹಾಗೂ ಬಸವ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಿ ಭಾಷಣ

ಪ್ರಕಟಣಾ ದಿನಾಂಕ: 29 APR 2017 2:14PM by PIB Bengaluru

ಬಸವ ಜಯಂತಿ 2017ರ ಉದ್ಘಾಟನೆ ಹಾಗೂ ಬಸವ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಿ ಭಾಷಣ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿಂದು, 23 ಭಾಷೆಗಳಿಗೆ ಭಾಷಾಂತರಗೊಂಡಿರುವ ಬಸವಣ್ಣನವರ ಪವಿತ್ರ ವಚನಗಳನ್ನು ದೇಶಕ್ಕೆ ಸಮರ್ಪಿಸಿದರು, ಮತ್ತು 2017ನೇ ಸಾಲಿನ ಬಸವ ಜಯಂತಿಯ ಅಂಗವಾಗಿ ಹಾಗೂ ಬಸವ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಭಾರತದ ಇತಿಹಾಸವು ಸೋಲು, ಬಡತನ ಅಥವಾ ವಸಾಹತು ಶಾಹಿಯಷ್ಟೇ ಅಲ್ಲ. ಭಾರತವು ಉತ್ತಮ ಆಡಳಿತದ, ಅಹಿಂಸೆಯ ಮತ್ತು ಸತ್ಯಾಗ್ರಹದ ಸಂದೇಶವನ್ನೂ ನೀಡಿದೆ ಎಂದು ತಿಳಿಸಿದರು.

ಬಸವಣ್ಣನವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ, ಹಲವು ಶತಮಾನಗಳ ಮೊದಲೇ ಬಸವೇಶ್ವರರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದರು. ನಮ್ಮ ದೇಶದಲ್ಲಿ ಹಲವು ಶ್ರೇಷ್ಠರು ಜನಿಸಿರುವುದು ನಮ್ಮ ಸೌಭಾಗ್ಯ ಎಂದರು. ನಮ್ಮ ಸಮಾಜಕ್ಕೆ ಯಾವಾಗ ಅಗತ್ಯವಿತ್ತೋ ಆಗ ನಮ್ಮ ಸಮಾಜದೊಳಗಿನಿಂದಲೇ ಸುಧಾರಣೆ ಹೊರಬಂದಿದೆ ಎಂದ ಅವರು, ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಸಮುದಾಯದ ಕೆಲವು ಮಹಿಳೆಯರು ಪಡುತ್ತಿರುವ ನೋವಿಗೆ ಅಂತ್ಯ ಹಾಡಲು ಮುಸ್ಲಿ ಸಮುದಾಯದೊಳಗೂ ಸುಧಾರಣೆ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡದಂತೆ ಮುಸ್ಲಿಂ ಸಮುದಾಯಕ್ಕೆ ಅವರು ಮನವಿ ಮಾಡಿದರು.

ಬಸವಣ್ಣನವರ ವಚನಗಳು ಉತ್ತಮ ಆಡಳಿತದ ಆಧಾರದ ಮೇಲಿವೆ ಎಂದು ಬಣ್ಣಿಸಿದ ಪ್ರಧಾನಿ, ವಸತಿ, ವಿದ್ಯುತ್ ಮತ್ತು ರಸ್ತೆ ಸೇರಿದಂತೆ ಅಭಿವೃದ್ಧಿಯ ಫಲ, ಯಾವುದೇ ತಾರತಮ್ಯವಿಲ್ಲದೆ ದೇಶದ ಪ್ರತಿಯೊಬ್ಬರಿಗೂ ದೊರಕಬೇಕು ಎಂದರು.

ಇದುವೇ ಸಬ್ ಕಿ ಸಾತ್ ಸಬ್ ಕ ವಿಕಾಸ್ (ಎಲ್ಲರೊಂದಿಗೆ ಎಲ್ಲರ ಪ್ರಗತಿ)ಯ ನಿಜವಾದ ತಿರುಳು ಎಂದು ಹೇಳಿದರು.

2015ರ ನವೆಂಬರ್ ತಿಂಗಳಿನಲ್ಲಿ ತಾವು ಲಂಡನ್ ನಲ್ಲಿ ಬಸವಣ್ಣನವರ ಪ್ರತಿಮೆಯನ್ನು ಅನಾವರಣ ಮಾಡಿದ್ದನ್ನು ಪ್ರಧಾನಿ ಸ್ಮರಿಸಿದರು.

ಸಮಾರಂಭದ ತರುವಾಯ ಪ್ರಧಾನಮಂತ್ರಿಯವರು ದಿವಂಗತ ಶ್ರೀ. ಎಂ.ಎಂ. ಕಲಬುರ್ಗಿ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಸಭಿಕರತ್ತ ನಡೆದರು.


(ಪ್ರಕಟಣೆ ಐ.ಡಿ.: 1488900) ವಿಸಿಟರ್ ಕೌಂಟರ್ : 98
ಪ್ರಕಟಣೆಯನ್ನು ಇದರಲ್ಲಿ ಓದಿ: English